ಗಣೇಶ ಚತುರ್ಥಿಯ ಶುಭಾಶಯಗಳು
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭಾ
ನಿರ್ವಿಘ್ನಮ್ ಕುರುಮೇ ದೇವ ಸರ್ವಕಾರ್ಯೇಷು ಸರ್ವದಾ
ಗಣೇಶ, ಗಣಪತಿ, ವಿನಾಯಕ, ಲಂಬೋದರ ಇತ್ಯಾದಿ ಹೆಸರುಗಳಿಂದ ಗಣಪ ನಮ್ಮೆಲ್ಲರ ಜೀವನದ ಒಂದು ಭಾಗವೇ ಆಗಿದ್ದಾನೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಹಲವರು ಘಟ್ಟಗಳಲ್ಲಿ ಗಣೇಶ ನಮಗೆ ಆದರ್ಶವಾಗಿ ಕಾಣುತ್ತಾನೆ. ತಾಯಿಯೊಬ್ಬಳಿಗೆ ಗೌರಿಯ ಮಡಿಲಲ್ಲಿ ಕುಳಿತ ಪುಟ್ಟ ಗಣಪ ಪ್ರಿಯನಾದರೆ, ಮಕ್ಕಳಿಗೆ ಇಲಿಯ ಬೆನ್ನೇರಿ ಬರುವ ಗಣಪ ಪ್ರಿಯನಾಗುತ್ತಾನೆ. ತಾಯಿಯ ಮಾತು ತಪ್ಪದ ಆಜ್ಞಾನುಧಾರಕ ಗಣಪ ಅಪ್ಯಾಯಮಾನನಾಗಿ ಕಂಡರೆ ಮತ್ತೊಮ್ಮೆ ಚಂದ್ರನಿಗೆ ಶಾಪವಿತ್ತ ಗಣೇಶ ಪ್ರಿಯನಾಗುತ್ತಾನೆ.
ಭಾರತೀಯರ ಸ್ವಾಭಿಮಾನವನ್ನು ಬಡಿದೆಬ್ಬಿಸಿ ಎಲ್ಲರನ್ನೂ ಒಂದುಗೂಡಿಸಲು ಬಾಲ ಗಂಗಾಧರ ತಿಲಕರೂ ಮೊರೆ ಹೋದದ್ದು ಗಣೇಶನ ಹಬ್ಬಕ್ಕೆ. ಸರ್ವರೂ ಒಂದಾಗಿ ಜಾತಿ ಮತ ಪಂಗಡಗಳ ಬೇಲಿಯನ್ನು ಮುರಿದು ಆಚರಿಸಲ್ಪಡುವ ಗಣೇಶ ಚತುರ್ಥಿ, ಸ್ವಾತಂತ್ರ್ಯ ಸಂಗ್ರಾಮದ ದಿಕ್ಕನ್ನೇ ಬದಲಾಯಿಸಿತು ಎಂದರೆ ಉತ್ಪ್ರೇಕ್ಷೆಯಲ್ಲ.
ಪ್ರಥಮ ವಂದನ, ವಿಘ್ನ ವಿನಾಶಕ ವಿನಾಯಕನನ್ನು ನೆನೆಯದೇ ಯಾವುದೇ ಕೆಲಸವೂ ಅಪೂರ್ಣ. ತನಗೆ ವಹಿಸಲ್ಪಟ್ಟ ಕೆಲಸವನ್ನು ಶ್ರದ್ದೆಯಿಂದ ನಿಷ್ಠೆಯಿಂದ ಮಾಡುವ ಗಣಪ, ಅತ್ಯಂತ ನಿಷ್ಠೆಯಿಂದ ದೇಶದ ರಕ್ಷಣೆ ಮಾಡುವ ಯೋಧರ ಕಣ ಕಣದಲ್ಲೂ ಇದ್ದಾನೆ.
ಭಾರತೀಯ ಯೋಧರ, ಸನಾತನ ಧರ್ಮದ, ಸೇವೆಗಾಗಿ ಸದಾ ಸಿದ್ಧರಿರುವ ಸ್ವಯಂ ಸೇವಕರ ಅಸಂಖ್ಯ ನಕ್ಷತ್ರಗಳಂತಹಾ ಕಥೆಗಳಲ್ಲಿ ಒಂದಿಷ್ಟನ್ನು ನಿಮ್ಮ ಮುಂದಿಡುವ ಅಳಿಲು ಸೇವೆಯ ಪ್ರಯತ್ನ ನಮ್ಮದು..
ನಿಮ್ಮೆಲ್ಲರ ಶುಭ ಹಾರೈಕೆಗಳೇ ನಮಗೆ ಶ್ರೀರಕ್ಷೆ